Saturday, August 11, 2012

2012ರಲ್ಲಿ ಪ್ರಸ್ತುತವಾಗಿರುವ ಶ್ರೀಕಾಂತರ ಕಥೆಗಳು

ಈ 2012ನೇ ಸಂವತ್ಸರದಲ್ಲಿ ಶ್ರೀಕಾಂತರ ಇಡಿಯ ಸಾಹಿತ್ಯವನ್ನು ಓದಿ, ಅದನ್ನು ಅರ್ಥೈಸಿ ಅದಕ್ಕೊಂದು ಚಾರಿತ್ರಿಕ ಮಹತ್ವವನ್ನೂ, ಸಂದರ್ಭವನ್ನೂ ಸೃಷ್ಟಿಸುವುದು ಸುಲಭವಾದ ಕೆಲಸವಲ್ಲ. ನಾನು ಈ ಹಿಂದೆ ಶ್ರೀಕಾಂತರ ಕಥೆಗಳನ್ನು ಓದಿಯೇ ಇರಲಿಲ್ಲ. ಈ ಮಾತು ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇರಬಹುದಾದ ಒಂದು ಕಂದರವನ್ನು ಪ್ರಾತಿನಿಧಿಕವಾಗಿ ಸೂಚಿಸುತ್ತದೆ. ನವ್ಯರ ಕಾಲದಲ್ಲಿ ಬಂದ ಮುಖ್ಯ ಲೇಖಕರಾದ ಆದರೆ ವಿರಳವಾಗಿ ಬರೆದ ರಾಜಲಕ್ಷ್ಮೀ ರಾವ್, ಕಾಮರೂಪಿ, ಗಿರಿ, ಖಾಸನೀಸ, ಕಥೆಗಾರ ಗಿರಡ್ಡಿ, ಕನ್ನಡದಲ್ಲಿ ಸೀಮಿತವಾಗಿ ಬರೆದ ರಾಮಾನುಜನ್ ಇಂಥ ದಿಗ್ಗಜರ ಯಾದಿಗೆ ಶ್ರೀಕಾಂತರೂ ಸೇರುತ್ತಾರೆ. ವಿರಳವಾಗಿ ಬರೆದದ್ದರಿಂದಲೇ ಒಂದು ರೀತಿಯ ಮರವೆಗೆ ಬಲಿಯಾಗುವುದೂ ಸಹಜ. ವಿಪುಲವಾಗಿ ಬರೆಯುವವರ ಹೊಸ ಕೃತಿಯ ಜೊತೆಜೊತೆಗೇ ಅವರುಗಳ ಹಳೆಯ ಕೃತಿಗಳ ಮರುಮೌಲ್ಯಮಾಪನವಾಗುತ್ತದೆ. ಹೀಗಾಗಿ ಅದು ಸಾಮೂಹಿಕ ನೆನಪಿಗೆ ಒಡ್ಡಿಕೊಳ್ಳುತ್ತದೆ. ಕನ್ನಡದಲ್ಲಿ ವಿರಳವಾಗಿ ಬರೆದೂ ಸಾಮೂಹಿಕ ಪ್ರಜ್ಞೆಯಲ್ಲಿ ಜೀವಂತವಾಗಿರುವವರು ದೇವನೂರ ಮಹಾದೇವ ಮಾತ್ರವೇನೋ. ಇಂಗ್ಲೀಷಿನಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರು ಟು ಕಿಲ್ ಎ ಮಾಕಿಂಗ್ ಬರ್ಡ್ ಬರೆದ ಹಾರ್ಪರ್ ಲೀ.

ಶ್ರೀಕಾಂತರ ಕಥನ ತಂತ್ರವನ್ನು ಇಂಥ ಚಾರಿತ್ರಿಕ ಸಂದರ್ಭದಲ್ಲಿ ನಾವು ಪರೀಕ್ಷಿಸಬೇಕಾಗಿದೆ. ಅವರ ಸಾಹಿತ್ಯವನ್ನು ಅವಲೋಕಿಸುವಾಗ ನನಗೆ ತಟ್ಟೆಂದು ಹೊಳೆಯುವುದು ಕನ್ನಡ ಸಾಹಿತ್ಯಕ್ಕೆ ವಿಶೇಷವಾದ ಆದರೆ ಅನವಶ್ಯಕವಾದ ಲೇಖಕನ ಜಾತಿ, ರಾಜಕೀಯ ಒಲವುಗಳ ಆಧಾರದ ಓರೆಗಲ್ಲಿನ ಮೇಲೆ ಸಾಹಿತ್ಯದ ಕೃಷಿಯನ್ನು ಉಜ್ಜಿ ನೋಡುವ ಪರಂಪರೆ. ಬ್ರಾಹ್ಮಣವಾದಿ-ದಲಿತ, ಎಡಪಂಥೀಯ-ಬಲಪಂಥೀಯ, ಈ ರೀತಿಯ ದೃಷ್ಟಕೋನದಿಂದ ಮಾಡುವ ಮೌಲ್ಯಮಾಪನದಿಂದಾಗಿ ಕೃತಿಗಳಿಗಿರಬಹುದಾದ ಮೂಲ ಸೃಜನಶೀಲ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗುತ್ತೇವೆಯೇ ಎಂದು ನನಗೆ ಆಗಾಗ ಅನ್ನಿಸುತ್ತದೆ.

ಶ್ರೀಕಾಂತರ ಸಾಹಿತ್ಯವನ್ನು ಹೀಗೆ ಅರ್ಥೈಸಿದರೆ ಅವರು ತಮ್ಮ ಮೂಲ ವಿಚಾರಧಾರೆಗೆ ವಿರುದ್ಧವಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಅವರ ಪ್ರಾಸ್ತಾವಿಕ ಮಾತುಗಳಲ್ಲಿ, ವ್ಯಾಸರಾವ್ ಬರೆದಿರುವ ಟಿಪ್ಪಣಿಗಳಲ್ಲಿ ತಿಳಿಯುವುದೇನೆಂದರೆ – ಆತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ, ಆ ವಿಚಾರಧಾರೆಯನ್ನು ಒಪ್ಪಿ ನಡೆದವರೂ ಎನ್ನುವ ವಿವರ. ಆದರೆ ಅವರ ಸೃಜನಶೀಲತೆಯಲ್ಲಿ ಆ ವಿಚಾರಧಾರೆಯ ಸಲೆ ಕಾಣುವುದಿಲ್ಲ. ನಿರಂಜನರ ಕಥೆಗಳನ್ನು ಓದಿದಾಗ ಅವರ ರಾಜಕೀಯದ ಒಲವು ನಮಗೆ ತಕ್ಷಣಕ್ಕೆ ತಿಳಿಯುತ್ತದಾದರೂ, ಶ್ರೀಕಾಂತರ ಕಥೆಗಳನ್ನು ಓದಿದಾಗ ಹಾಗನ್ನಿಸುವುದಿಲ್ಲ.

ಶ್ರೀಕಾಂತರು ಬರೆದ ಸಮಯದ ಚೌಕಟ್ಟಿನಲ್ಲಿ ಅವರ ಕಥೆಗಳನ್ನು ಓದಿದಾಗ ಕೆಲವು ವಿಚಾರಗಳು ನಮ್ಮನ್ನು ತಟ್ಟುತ್ತವೆ. ಅವರ ಸಾಹಿತ್ಯ ಗ್ರಾಮದ ಚೌಕಟ್ಟಿನಲ್ಲಿ ಮೂಡುವುದಿಲ್ಲ. ಜಾತಿ ಪದ್ಧತಿಯಲ್ಲಿ ಉದ್ಭವವಾಗುವುದಿಲ್ಲ. ಶೋಷಣೆಯ ಮಾತಾಗಲೀ, ಮಣ್ಣಿನ ಮಾತಾಗಲೀ ಕಾಣುವುದಿಲ್ಲ, ಒಂದು ಭೌಗೋಳಿಕ ಸಂದರ್ಭಕ್ಕೂ ಅವು ಸೇರುವುದಿಲ್ಲ. ಅನಂತಮೂರ್ತಿಯವರ ಸಂಸ್ಕಾರ, ದೇವನೂರರ ಕುಸುಮಬಾಲೆ, ಮಾಸ್ತಿ, ಲಂಕೇಶರ ಕಥೆಗಳಿಗೆ ಒಂದು ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ಸಾಮಾಜಿಕ ಸಂದರ್ಭವಿತ್ತು. ಆದರೆ ಶ್ರೀಕಾಂತರ ಕಥೆಗಳಿಗೆ ಒಂದು ಸಾರ್ವತ್ರಿಕ ಗುಣವಿದೆ. ಆ ಸಾರ್ವತ್ರಿಕ ಗುಣವನ್ನು ನಾವು ಗುರುತಿಸಬೇಕಾದರೆ ಆ ಕಥೆಗಳನ್ನು ಹಿಂದಿ, ಮರಾಠಿ, ತೆಲುಗು, ತಮಿಳು, ಉರ್ದುವಿನ ಸಂದರ್ಭದಲ್ಲಿ ಊಹಿಸಿ ನೋಡಬೇಕು. ಆಗಲೂ ಅವರ ಕಥೆಗಳು ಪಾಸಾಗುತ್ತವೆ. ಅಂದರೆ ಅದನ್ನು ಗ್ರಾಮ್ಯ-ನಗರ, ಬ್ರಾಹ್ಮಣ-ದಲಿತ, ಆಧುನಿಕ-ಮಡಿವಂತ ಎಂದು ವರ್ಗೀಕರಿಸುವುದಕ್ಕೆ ಸಾಧ್ಯವಿಲ್ಲ. ಒಂದೇ ಕಾಲಕ್ಕೆ ಈ ಕಥೆಗಳು ನವ್ಯದಂತೆಯೂ, ಪ್ರಗತಿಶೀಲದಂತೆಯೂ ಕಾಣಿಸುತ್ತವೆ. ಹೀಗಾಗಿ ಶ್ರೀಕಾಂತರನ್ನು ಒಬ್ಬ ತೆರೆದ ಮನಸ್ಸಿನ ಆಧುನಿಕ ಕಥೆಗಾರ ಎಂದು ಮಾತ್ರ ಕರೆಯಲು ಸಾಧ್ಯ. ಅವರ ಕಥೆಗಳು ಎಲ್ಲೇ ನಡೆದರೂ ಅವಕ್ಕೆ ನಗರೀಕರಣದ, ಅನಾಮಿಕತ್ವದಿಂದ ಬರಬಹುದಾದ ವಿಶಾಲಮನಸ್ಸಿನ ಆಧುನಿಕ ಲೇಪವಿರುವುದನ್ನು ಕಾಣಬಹುದು.

ಶ್ರೀಕಾಂತರ ಕಥೆಗಳಲ್ಲಿ ಎರಡು ಮುಖ್ಯ ಧಾರೆಗಳಿವೆ. ಒಂದು: ಹೆಣ್ಣಿನ ಬಗೆಗಿನ ಅತ್ಯಂತ ಕೂತಹಲ – ಅದರಿಂದ ಬೆಳೆಯುವ ಪ್ರೀತಿ, ಪ್ರೀತಿಗೆ ಆದರ್ಶದ ಲೇಪ. ಆದರ್ಶಕ್ಕಾಗಿ ಸಾಮಾಜಿಕ ಕಟ್ಟುಪಾಡುಗಳನ್ನು-ಮಡಿವಂತಿಕೆಯನ್ನು ಉಲ್ಲಂಘಿಸುವ ಕಥೆಗಳು.  ಎರಡು: ಸಿಟ್ಟಿನ ಧಾರೆ. ಸಿಟ್ಟು ಸಮಾಜದ ಕಟ್ಟುಪಾಡುಗಳಿಗೆ ಸಂಬಂಧಿಸಿದ್ದಾಗಿರಬಹುದು, ಮೌಲ್ಯಗಳ ಬಂಧನದ ಬಗೆಗಿರಬಹುದು, ಮೌಲ್ಯಗಳ ಕುಸಿತದ ಬಗೆಗೂ ಇರಬಹುದು. ಈ ಸಿಟ್ಟನ್ನು ಶ್ರೀಕಾಂತರು ಎರಡು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಒಂದು: ವ್ಯಂಗ್ಯ ಕುಹಕದ ದಾರಿ, ಎರಡು: ಅಸಹಾಯಕತೆಯ ದಾರಿ. ಭಾರತ್ ಮಾತಾಕೀ ಜೈ ಕುಹಕದ ಮಾದರಿಯಾದರೆ, ಕೀಚಕರು ಅಸಹಾಯಕತೆಯ-ಚಡಪಡಿಕೆಯ ಮಾದರಿಯಾಗಿದೆ.

ಸಣ್ಣ ಕಥೆಯೆಂದರೆ ಸಣ್ಣ ಕಥೆಯಷ್ಟೇ. ದೊಡ್ಡವಿಚಾರವನ್ನೂ, ಕಾದಂಬರಿಗಿರಬಹುದಾದ ಹರವನ್ನೂ ಮೂರ್ನಾಲ್ಕು ಪುಟಗಳಿಗೆ ಇಳಿಸುವ ಸಾಧ್ಯತೆಯನ್ನು ಶ್ರೀಕಾಂತರು ತೋರಿಸುತ್ತಾರೆ. ಆರ್ಜೆಂಟೀನಾದ ಲೇಖಕ ಹಾರ್ಹೆ ಲುಯಿ ಬೋರ್ಹೆಸ್ ಒಮ್ಮೆ ಹೇಳಿದ್ದನಂತೆ – ಕಾದಂಬರಿ ಬರೆಯಲು ಹತ್ತು ಪುಟಗಳಷ್ಟೇ ಸಾಕು ಮಿಕ್ಕದ್ದು ವಿವರಗಳ ಮಹಾಪೂರ. ತೆಲುಗಿನಲ್ಲಿ ಸತ್ಯಂ ಶಂಕರ ಮಂಚಿ ಯಾವದೇ ಕಥೆಯನ್ನು ಮೂರೇ ಪುಟಗಳಲ್ಲಿ ಬರೆಯುತ್ತಿದ್ದರು. ಆ ಕಥೆಗಳು ಸರಳವಾಗಿದ್ದರೂ ಅವುಗಳಿಗಿದ್ದ ಅನಂತ ಸಾಧ್ಯತೆಗಳು ಒಂದು ವಿಶಾಲವಾದ ಕ್ಯಾನ್ವಾಸನ್ನು ಒದಗಿಸುತ್ತಿತ್ತು. ಶ್ರೀಕಾಂತರ ಕಥನವೂ ಅದೇ ಚೌಕಟ್ಟಿಗೆ ಸೇರಿದ್ದು. ಸಣ್ಣ ವಾಕ್ಯಗಳು. ಅದಕ್ಕೇ ಇರುವ ಲಯ. ಲಯದಿಂದಲೇ ಉಂಟಾಗುವ ಒಟ್ಟಾರೆ ಅನುಭವ ಓದಿಗಿಂತ ಮಿಗಿಲಾದದ್ದೇನನ್ನೋ ನೀಡುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಕೇಳಿ: "ಲೇ ಅಂದರೆ ಅವಳೇ. ಪಾಪ ರಾಮಶೇಷು. ಪಾಪ ಮೂರನೇ ತಾಳಿ ಕಟ್ಟಿಸಿಕೊಂಡವಳು. ಪಾಪ ಅವಳಿಗೆ ಮೊದಲನೆಯದ್ದಾದರೂ ಯಜಮಾನ್ರು ಕಟ್ಟಿದ್ದು ಮೂರನೆಯದು. ಪಾಪ ಈ ಮನೆಗೆ ಬಂದಾಗಿನಿಂದಲೂ ಹೆರುವುದೇ ಕೆಲಸ.  ಪಾಪ ಒಂದಾದಮೇಲೊಂದು. ಪಾಪ ಒಂದಿನವಾದರೂ ಚಕಾರವೆತ್ತಿದವಳಲ್ಲ. ಪಾಪ...." (ಕಥೆ: ಕೊಡೆಯ ಕೆಳಗೆ, ಪುಟ:88). ಹೀಗೆ ರಾಮಶೇಷುವಿನ ವಿವರಣೆ ಮುಂದುವರೆಯುತ್ತದೆ. ಆ ವಿವರಣೆಯಲ್ಲಿ ಕಥೆ ಓದುತ್ತಿರುವ ನಿಶ್ಶಬ್ದ ವಾತಾವರಣದಲ್ಲಿ ಈ ಪಾಪ ಪದದ ಅನುರಣನ ಮೌನವನ್ನು ಭೇದಿಸುವ ಶಬ್ದವಾಗಿದೆ. ತಂತ್ರದ ದೃಷ್ಟಿಯಿಂದ ಇದು ಒಂದು ಅದ್ಭುತವೆಂದೇ ಹೇಳಬೇಕು. ಕಥೆಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ನಿರೂಪಿಸುವುದನ್ನು ಕಂಡಿದ್ದೇವೆ. ಇವರ ಕಥೆಗಳು ಶ್ರಾವ್ಯರೂಪದಲ್ಲೂ ದಕ್ಕುತ್ತವೆ.

ಗಂಭೀರ ಶುಶ್ಕ ಕಥೆಗಳ ನಡುವೆ ಆಗಾಗ " ಸೊಸೆ ಮಾತಾಡಲಿಲ್ಲ"  ಎನ್ನುವಂತಹ ಲವಲವಿಕೆಯ ಕಥೆಗಳು ನುಸುಳಿ ಮನಸ್ಸಿಗೆ ಮುದ ನಿಡುತ್ತವೆ. ಬುದ್ಧಿಗೆ ಕಸರತ್ತು ನೀಡಿ ಮನಸ್ಸನ್ನು ವಿಚಲಿತಗೊಳಿಸುವ ಕಥೆಗಳ ನಡುವಿನಲ್ಲಿ ಆಗಾಗ ಇಂಥದೊಂದು ಕಥೆಯನ್ನು ನೀಡಿ ಶ್ರೀಕಾಂತರು ವೈವಿಧ್ಯವನ್ನೂ ನೀಡಿದ್ದಾರೆ.

ಆಧುನಿಕ ಕನ್ನಡ ಕಥೆಯ ಚರ್ಚೆಯಲ್ಲಿ ಶ್ರೀಕಾಂತರ ಭಿನ್ನ ಧ್ವನಿಯನ್ನು ನಾವು ಗುರುತಿಸಬೇಕಾದ ಅವಶ್ಯಕತೆ ಇದೆ. ಅವರು ಬರೆದ ಸಂದರ್ಭದಲ್ಲಿ ಆ ಕಥೆಗಳು ಎಷ್ಟು ಮುಖ್ಯವಾಗಿದ್ದುವೋ ಇಂದೂ ಅಷ್ಟೇ ಪ್ರಸ್ತುತವೆನ್ನಿಸುವಂತೆ ಇವೆ. 183ಪುಟಗಳ ಅವರ ಸಮಗ್ರ ಸಾಹಿತ್ವವನ್ನು ಪ್ರಸ್ತುತಪಡಿಸುತ್ತಾ ಕೆ.ನರಸಿಂಹಮೂರ್ತಿ, ಎಸ್.ದಿವಾಕರ್, ಪ್ರಧಾನ ಗುರುದತ್ತ, ರಾಮದಾಸ್, ಎಂ.ಎನ್.ವ್ಯಾಸರಾವ್, ಮಾಧವ ಕುಲಕರ್ಣಿಯಂತಹ ಮಹನೀಯರು ಬರೆದಿರುವ ಲೇಖನಗಳೂ ಶ್ರೀಕಾಂತರ ಸಾಹಿತ್ಯದ ಮಹತ್ವವನ್ನು ತೆರೆದಿಡುತ್ತವೆ. ಶ್ರೀಕಾಂತರ ಸಮಗ್ರ ಕಥೆಗಳು ಒಂದು ಮುಖ್ಯ ಪುಸ್ತಕವೆನ್ನುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ನಾವು ಆ ಮಹತ್ವವನ್ನು ಗುರುತಿಸಿ ಅವರ ದೇಣಿಗೆಯ ಮರುಮೌಲ್ಯಮಾಪನಮಾಡುವ ಅವಶ್ಯಕತೆ ಇದೆ.

ಭಾನುವಾರ, 05 ಆಗಸ್ಟ್ 2012


No comments:

Post a Comment